ಪತಂಜಲಿಯ ರಾಜ ಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ

ಪರಮಹಂಸ ಯೋಗಾನಂದರು ತಮ್ಮ ನಿರ್ಧಾರಾತ್ಮಕ ಅನುವಾದ ಹಾಗೂ ಭಾಷ್ಯ ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್‌ ಗೀತೆಯಲ್ಲಿ, ಭಾರತದ ಯೋಗದ ಅತ್ಯಂತ ಜನಪ್ರಿಯ ಗ್ರಂಥವಾದ ಗೀತೆಯ ಅನ್ಯೋಕ್ತಿಯು, ಯೋಗದ ವಿಜ್ಞಾನವನ್ನು ಸಂಪೂರ್ಣವಾಗಿ ವಿಷದಪಡಿಸುತ್ತದೆ ಎಂಬುದನ್ನು ತಿಳಿಯಪಡಿಸಿದ್ದಾರೆ.

ಮಹರ್ಷಿ ಪತಂಜಲಿಯು, ಗೀತೆಯಲ್ಲಿ ಅಡಕವಾಗಿರುವ ಯೋಗದ ಸಂದೇಶವನ್ನು ಸಂಪೂರ್ಣವಾಗಿ ಅರಿತಿದ್ದು, ತನ್ನ ಪುಟ್ಟ ಆದರೆ ಮಹತ್ವದ ಗ್ರಂಥವಾದ ಯೋಗ ಸೂತ್ರದಲ್ಲಿ ರಾಜ (“ರಾಜೋಚಿತ”) ಯೋಗದ ಸಾರವನ್ನು ಸರಳವಾಗಿ ಹಾಗೂ ಕ್ರಮಬದ್ಧವಾಗಿ ವ್ಯವಸ್ಥಿತಗೊಳಿಸಿದ್ದಾನೆ.

ಪರಮಹಂಸ ಯೋಗಾನಂದರು ಹೇಳುತ್ತಾರೆ, ಪತಂಜಲಿಯು “ಸಂಕ್ಷಿಪ್ತ ಸೂತ್ರಗಳ ಸಾಲುಗಳಲ್ಲಿ ಭಗವತ್‌-ಸಂಸರ್ಗದ ಅತ್ಯಂತ ವಿಸ್ತೃತ ಹಾಗೂ ಸೂಕ್ಷ್ಮ ವಿಜ್ಞಾನವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾನೆ–ಅವನು ಭೇದವಿಲ್ಲದ ಪರಮಾತ್ಮನೊಡನೆ ಆತ್ಮದ ಸಂಯೋಗದ ಮಾರ್ಗವನ್ನು ಒಂದು ಸುಂದರ, ಸ್ಪಷ್ಟ, ಹಾಗೂ ಸಂಕ್ಷಿಪ್ತವಾಗಿ ಹೇಗೆ ವಿವರಿಸಿದ್ದಾನೆ ಎಂದರೆ, ವಿದ್ವಾಂಸರ ತಲೆಮಾರುಗಳು ಯೋಗ ಸೂತ್ರಗಳನ್ನು ಯೋಗದ ಅಗ್ರಗಣ್ಯ ಪುರಾತನ ಕೃತಿ ಎಂದು ಒಪ್ಪಿಕೊಂಡಿವೆ.”

ಪತಂಜಲಿಯ ಯೋಗ ಸಿದ್ಧಾಂತವು ಅಷ್ಟಾಂಗ ಮಾರ್ಗ ಎಂದು ಪ್ರಚಲಿತವಾಗಿದೆ, ಇದು ಭಗವತ್‌-ಸಾಕ್ಷಾತ್ಕಾರದ ಅಂತಿಮ ಗುರಿಯೆಡೆಗೆ ಕರೆದೊಯ್ಯುತ್ತದೆ.

ಯೋಗದ ಅಷ್ಟಾಂಗ ಮಾರ್ಗ:

  • ಯಮ: (ಒಬ್ಬರು ಈ ಕೆಲಸಗಳನ್ನು ಮಾಡದೇ ದೂರವಿರಬೇಕಾದ ನೈತಿಕ ನಿಯಮಗಳನ್ನು ತಿಳಿಸುತ್ತದೆ): ಇತರರಿಗೆ ಹಾನಿ ಮಾಡುವುದು, ಅಸತ್ಯವನ್ನು ನುಡಿಯುವುದು, ಕಳ್ಳತನ ಮಾಡುವುದು, ಅತಿಯಾದ ಲೈಂಗಿಕ ಹವ್ಯಾಸ (ಲೈಂಗಿಕ ಪ್ರಚೋದನೆಯ ಮೇಲೆ ನಿಯಂತ್ರಣ ಇಲ್ಲದಿರುವುದು), ಮತ್ತು ಅತಿಯಾಸೆ
  • ನಿಯಮ: (ಬೆಳೆಸಿಕೊಳ್ಳಬೇಕಾದ ಆಧ್ಯಾತ್ಮಿಕ ಗುಣಗಳು ಹಾಗೂ ನಡುವಳಿಕೆ): ಶರೀರ ಹಾಗೂ ಮನಸ್ಸಿನ ಪರಿಶುದ್ಧತೆ, ಎಲ್ಲ ಪರಿಸ್ಥಿತಿಗಳಲ್ಲೂ ಸಂತೃಪ್ತಿ, ಸ್ವ-ಶಿಸ್ತು, ಸ್ವಾಧ್ಯಾಯ (ಅವಲೋಕನ) ಹಾಗೂ ಭಗವಂತ ಹಾಗೂ ಗುರುವಿನ ಮೇಲೆ ಭಕ್ತಿ
  • ಆಸನ: ಸರಿಯಾದ ಭಂಗಿ
  • ಪ್ರಾಣಾಯಾಮ: ಪ್ರಾಣದ ನಿಯಂತ್ರಣ, ಶರೀರದಲ್ಲಿ ಪ್ರವಹಿಸುವ ಸೂಕ್ಷ್ಮ ಪ್ರವಾಹಗಳು
  • ಪ್ರತ್ಯಾಹಾರ: ಇಂದ್ರಿಯಗಳನ್ನು ಬಾಹ್ಯ ವಸ್ತು-ವಿಷಯಗಳಿಂದ ಹಿಂತೆಗೆದುಕೊಳ್ಳುವ ಮೂಲಕ, ಪ್ರಜ್ಞೆಯನ್ನು ಆಂತರೀಕರಿಸುವುದು
  • ಧಾರಣ: ಕೇಂದ್ರಿತ ಏಕಾಗ್ರತೆ, ಮನಸ್ಸನ್ನು ಒಂದು ಚಿಂತನೆ ಅಥವಾ ವಸ್ತು-ವಿಷಯದ ಮೇಲೆ ನಿಲ್ಲಿಸುವುದು
  • ಧ್ಯಾನ: ಧ್ಯಾನ, ಭಗವಂತನ ವಿಸ್ತೃತ ಗ್ರಹಿಕೆಯನ್ನು ಅವನ ಯಾವುದಾದರೂ ಒಂದು ಅಸೀಮ ಅಂಶದ ಮೇಲೆ ಗ್ರಹಿಸುವುದು–ಪರಮಾನಂದ, ಶಾಂತಿ, ಬ್ರಹ್ಮಾಂಡ ಬೆಳಕು, ಬ್ರಹ್ಮಾಂಡ ನಾದ, ಪ್ರೇಮ, ಪರಿಜ್ಞಾನ, ಇತ್ಯಾದಿ. —ಇಡೀ ಬ್ರಹ್ಮಾಂಡದಲ್ಲಿ ಸಂಪೂರ್ಣವಾಗಿ ವ್ಯಾಪಿಸಿರುವಂಥದ್ದು
  • ಸಮಾಧಿ: ವೈಯಕ್ತಿಕ ಆತ್ಮವು ಬ್ರಹ್ಮಾಂಡ ಚೇತನದೊಂದಿಗೆ ಐಕ್ಯವಾಗಿರುವ ಅತೀತಪ್ರಜ್ಞೆಯ ಅನುಭವ

ಪ್ರಾಣಾಯಾಮದ ಪರಮೋಚ್ಛ ಅಭ್ಯಾಸವು (ಪ್ರಾಣ-ಶಕ್ತಿಯ ನಿಯಂತ್ರಣ, ಅಷ್ಟಾಂಗ ಮಾರ್ಗದ ನಾಲ್ಕನೇ ಹೆಜ್ಜೆ), ಪ್ರಜ್ಞೆಯ ಆಂತರೀಕರಣ (ಪ್ರತ್ಯಾಹಾರ) ಮತ್ತು ಅಂತಿಮ ಗುರಿಯಾದ ಪರಮಾತ್ಮನೊಂದಿಗೆ ಐಕ್ಯತೆ (ಸಮಾಧಿ)ಯನ್ನು ಸಿದ್ಧಿಸಿಕೊಳ್ಳುವ ಪ್ರಾಥಮಿಕ ಉದ್ದೇಶದಲ್ಲಿ ರಾಜಯೋಗದ ವೈಜ್ಞಾನಿಕ ಧ್ಯಾನದ ತಂತ್ರಗಳನ್ನು ಒಳಗೊಂಡಿದೆ.

ನಮ್ಮ ಸುತ್ತಲಿರುವ ಜಗತ್ತನ್ನು ನಾವು ಗ್ರಹಿಸಲು, ಸಾಮಾನ್ಯವಾಗಿ ಪ್ರಾಣ ಶಕ್ತಿಯು ನರವ್ಯೂಹ ವ್ಯವಸ್ಥೆ ಹಾಗೂ ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ನಿರಂತರ ಪ್ರವಹಿಸುತ್ತದೆ. ಪ್ರಾಣಾಯಾಮದ ತಂತ್ರಗಳ ಮೂಲಕ ಅದೇ ಪ್ರಾಣ ಶಕ್ತಿಯನ್ನು (ಪ್ರಾಣ) ನಮ್ಮೊಳಗಿರುವ ವಿಸ್ತೃತ ಪ್ರಪಂಚವನ್ನು ಗ್ರಹಿಸಲು, ಬೆನ್ನುಹುರಿ ಹಾಗೂ ಮಿದುಳಿನಲ್ಲಿರುವ ಆಧ್ಯಾತ್ಮಿಕ ಗ್ರಹಿಕೆಯ ಉನ್ನತ ಕೇಂದ್ರಗಳಿಗೆ ಅಂತರ್ಮುಖವಾಗಿ ನಿರ್ದೇಶಿಸಲಾಗುತ್ತದೆ.

ವೈಎಸ್‌ಎಸ್‌ ಯೋಗದಾ ಸತ್ಸಂಗದ ಪಾಠಗಳಲ್ಲಿ, ಕಲಿಸುವ ಧ್ಯಾನದ ತಂತ್ರಗಳು,ಅದರಲ್ಲೂ ವಿಶೇಷವಾಗಿ ಕ್ರಿಯಾ ಯೋಗ ತಂತ್ರ, ರಾಜ ಯೋಗ ಪ್ರಾಣಾಯಾಮದ ತಂತ್ರಗಳಲ್ಲೇ ಅತ್ಯಂತ ಮೇಲ್ಮಟ್ಟದವು. ಪರಮಹಂಸ ಯೋಗಾನಂದರು ಅದನ್ನು ಆಗಾಗ್ಗೆ ಆತ್ಮವು ಭಗವಂತನ ಪರಮಾನಂದದೊಡನೆ ಮತ್ತೆ ಒಂದುಗೂಡುವುದಕ್ಕೆ ಅತ್ಯಂತ ಶೀಘ್ರವಾದ ಮಾರ್ಗ ಎಂದು ಹೇಳುತ್ತಿದ್ದರು.

ಪ್ರಾಣಾಯಾಮದ ಅಭ್ಯಾಸದಿಂದ ನಮ್ಮ ಗಮನವನ್ನು ನೇರ ವಿಧಾನದ ಮೂಲಕ, ಜೀವನದ ಅಡೆತಡೆಗಳಿಂದ ನಾವು ಮುಕ್ತ ಮಾಡುತ್ತೇವೆ–ಅನ್ಯಥಾ ನಮ್ಮ ಪ್ರಜ್ಞೆಯನ್ನು ಬಹಿರ್ಮುಖಗೊಳಿಸುವ ಶಾರೀರಿಕ ಶಕ್ತಿಯ ಪ್ರವಹನವನ್ನು ನಿಯಂತ್ರಿಸುತ್ತಾ. ಹೀಗೆ ನಾವು ನಮ್ಮನ್ನು ಅವಿಚಲ ಅಮರ ಅತ್ಮ ಎಂಬ ನಮ್ಮ ನೈಜ ಸ್ವ-ಸ್ವರೂಪವನ್ನು ಗುರುತಿಸುವುದರಿಂದ ತಡೆಯುವ, ಅವಿಶ್ರಾಂತ ಆಲೋಚನೆಗಳು ಹಾಗೂ ಪ್ರಕ್ಷುಬ್ಧ ಭಾವೋದ್ವೇಗಗಳನ್ನು ಶಾಂತ ಗೊಳಿಸುತ್ತೇವೆ.

ಇದನ್ನು ಹಂಚಿಕೊಳ್ಳಿ