ಪ್ರಪಂಚದಾದ್ಯಂತದ ಸಂದೇಶಗಳು

img_ಸ್ಮರಣಾರ್ಥ_ಶ್ರೀ_ದಯಾ_ಮಾತಾ

(31 ಜನವರಿ, 1914 – 30 ನವೆಂಬರ್‌, 2010)

15 ಮಾರ್ಚ್‌, 2011

ಜಗತ್ತಿನೆಲ್ಲೆಡೆಯಿಂದ ಶ್ರೀ ದಯಾ ಮಾತಾರವರಿಗೆ ಗೌರವದ ಪ್ರಶಂಸೆಗಳು

ಶ್ರೀ ದಯಾ ಮಾತಾರವರ ನಿಧನದ ನಂತರ, ಸಾವಿರಾರು ಸಂದೇಶಗಳು — ಇಮೇಲ್‌ಗಳು, ಪತ್ರಗಳು ಮತ್ತು ಫೋನ್ ಕರೆಗಳು — ಪ್ರಪಂಚದಾದ್ಯಂತದ ಹಿತೈಷಿಗಳು ಮತ್ತು ಸ್ನೇಹಿತರಿಂದ ಮದರ್ ಸೆಂಟರ್‌ಗೆ ಹರಿದುಬಂದವು. ಕೆಲವು ಭಕ್ತರು ಹಲವಾರು ವರ್ಷಗಳಲ್ಲಿ ಮಾ ಅವರೊಂದಿಗಿನ ಭೇಟಿಗಳಿಂದ ಪಡೆದ ಸ್ಫೂರ್ತಿಯ ಬಗ್ಗೆ ನೆನಪಿಸಿಕೊಂಡರು, ಆದರೆ ಅನೇಕರು ಅವರನ್ನು ಎಂದಿಗೂ ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ಆಂತರಿಕ ಸಂಸರ್ಗದ ಮೂಲಕ ಅವರೊಂದಿಗೆ ನಿಕಟ ಸಂಪರ್ಕವನ್ನು ಅನುಭವಿಸಿದರು.

ಇಲ್ಲಿ ಪ್ರಸ್ತುತಪಡಿಸಲಾದ ಆಯ್ದ ಭಾಗಗಳು ಈ ಪ್ರೀತಿಯ ಆಧ್ಯಾತ್ಮಿಕ ಮುಖ್ಯಸ್ಥೆಯೊಂದಿಗಿನ ಜನರ ವೈಯಕ್ತಿಕ ಅನುಭವಗಳ ದೊಡ್ಡ ವ್ಯಾಪ್ತಿಯ ಒಂದು ನಸುನೋಟವನ್ನು ಒದಗಿಸುತ್ತದೆ, ಆದರೂ ಎಲ್ಲವೂ ಶ್ರೀ ದಯಾ ಮಾತಾರವರ ವೈಶಿಷ್ಟ್ಯವಾದ ಅನಿರ್ಬಂಧಿತ ಪ್ರೀತಿ ಮತ್ತು ಸಹಾನುಭೂತಿಯ ಸಂಯುಕ್ತ ವಿಷಯವನ್ನು ಪ್ರತಿಬಿಂಬಿಸುತ್ತವೆ.

“ನಮ್ಮ ಪ್ರೀತಿಯ ದಯಾ ಮಾತಾರವರ ಅಗಲಿಕೆಯಲ್ಲಿ ನಾವು ಗಾಢವಾದ ಧ್ಯಾನಗಳು ಮತ್ತು ಪ್ರೀತಿಯ ಅಂತರ್ಬೋಧೆಗಳಿಂದ ನಮ್ಮ ಹೃದಯಕ್ಕೆ ನೇರವಾಗಿ ಮಾ ಅವರ ಸೌಮ್ಯ ಧ್ವನಿಯಲ್ಲಿ ಪಿಸುಗುಟ್ಟುವಿಕೆಯಿಂದ ಆಳವಾಗಿ ಆಶಿರ್ವದಿಸಲ್ಪಟ್ಟಿದ್ದೇವೆ ಎಂದು ನಾನು ಕಂಡುಕೊಂಡಿದ್ದೇನೆ, ಅನೇಕ ಭಕ್ತರೂ ಹಾಗೇ ಭಾವಿಸಿರಬೇಕು. ಈ ಆನಂದದಾಯಕ ಸ್ಮರಣಾರ್ಥದ ದಿನಗಳಲ್ಲಿ ಅನುಭವಿಸಿದಂತಹ ಅಪಾರ ಪ್ರೀತಿಯನ್ನು ನಾನು ಹಿಂದೆಂದೂ ಅನುಭವಿಸಿಲ್ಲ. ತಮ್ಮ ಆರೋಹಣದಲ್ಲಿಯೂ ನಮ್ಮ ಪ್ರೀತಿಯ ಮಾ ನಮ್ಮನ್ನು ಆಶೀರ್ವದಿಸುತ್ತಲೇ ಇರುತ್ತಾರೆ ಮತ್ತು ನಾವು ಎಂದಿಗೂ ಮೊದಲಿನಂತಿರುವುದಿಲ್ಲ, ಇದು ನನಗೆ ಖಚಿತವಾಗಿದೆ.”

“ಅವರ ಅಗಲಿಕೆಯು ಅವರು ಒದಗಿಸಿದ ಮಹತ್ತರವಾದ ಬೇಡಿಕೆಯ ಮತ್ತು ಗಮನಾರ್ಹ ಸೇವೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ತಂದಿದೆ — ಹಲವಾರು ವರ್ಷಗಳ ಕಾಲ, ನಮ್ಮೆಲ್ಲರಿಗೂ ಮಾತ್ರವಲ್ಲದೆ, ಇಡೀ ಪ್ರಪಂಚಕ್ಕೆ.”

“ಇದು ಕೇವಲ ನಾವು ಭಕ್ತರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ದೊಡ್ಡ ನಷ್ಟವಾಗಿದೆ ಏಕೆಂದರೆ ಒಬ್ಬ ಮಹಾನ್ ಸಂತಳು ಹಾಗೂ ಭಗವತ್‌ಪ್ರೇಮಿ ಈಗ ಈ ಭೂಮಿಯ ಮೇಲೆ ನಡೆದಾಡುತ್ತಿಲ್ಲ. ಅವರ ಜೀವನ, ಅವರ ಸಂದೇಶ ಮತ್ತು ಪರಿಪೂರ್ಣ ಶಿಷ್ಯತ್ವದ ಅವರ ಉದಾಹರಣೆಯು ದಶಕಗಳಿಂದ ನಮಗೆಲ್ಲರಿಗೂ ಸ್ಫೂರ್ತಿ ನೀಡಿತು. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಅವರ ಪುಸ್ತಕಗಳನ್ನು ಎಷ್ಟು ಓದಿದ್ದೇನೆ ಮತ್ತು ಅವರ ಟೇಪ್‌ಗಳನ್ನು ಎಷ್ಟು ಬಾರಿ ಕೇಳಿದ್ದೇನೆ ಎಂದರೆ ಅವರ ಧ್ವನಿ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಮುದ್ರಿತವಾಗಿದೆ ಮತ್ತು ಅವರ ಮಾತುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಅವರು ನನ್ನ ಸಾಧನೆಯಲ್ಲಿ ಇಂದಿಗೂ ಎಂದೆಂದಿಗೂ ಸ್ಫೂರ್ತಿಯ ಆಳವಾದ ಮೂಲವಾಗಿದ್ದಾರೆ. ಇಷ್ಟು ದೀರ್ಘಕಾಲ ನಮ್ಮೊಂದಿಗೆ ಇರುವಂತೆ ಕೇಳಿಕೊಂಡದ್ದಕ್ಕಾಗಿ ನಾನು ಜಗನ್ಮಾತೆಗೆ ಧನ್ಯವಾದ ಹೇಳುತ್ತೇನೆ. ದಯಾ ಮಾತಾಜಿಯವರನ್ನು ಕಳೆದುಕೊಂಡಿದ್ದಕ್ಕಾಗಿ ದುಃಖಿತನಾಗಿದ್ದರೂ, ನಮ್ಮ ಜಗನ್ಮಾತೆಯ ದಿವ್ಯ ಪರಮಾನಂದದ ಅನಂತ ಸಾಗರದಲ್ಲಿ ಅವರು ಈಗ ಮುಕ್ತರಾಗಿರುವುದರಿಂದ ನನಗೆ ಸಂತೋಷವಾಗಿದೆ. ಅವರು ಈಗ ಎಲ್ಲಿರುವರೋ ಅಲ್ಲಿಂದಲೇ, ಅಂದರೆ ಗುರುಗಳ ಪಕ್ಕದಿಂದಲೇ, ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಮತ್ತು ನಮಗಾಗಿ ಪ್ರಾರ್ಥಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ.”

“ನಾನು ಅವರಿಗೆ ಹಲವಾರು ಬಾರಿ ಬರೆದಿದ್ದೇನೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಅವರ ವೈಯಕ್ತಿಕ ಆಸಕ್ತಿ ಕಂಡು ನನಗೆ ಆಶ್ಚರ್ಯವಾಗಿತ್ತು, ಯಾವಾಗಲೂ ಪ್ರೀತಿ ಮತ್ತು ವಿವೇಚನೆಯ ಪರಾಮರ್ಶೆಗಳೊಂದಿಗೆ ಉತ್ತರಿಸುವುದು, ತಾವು ಮಾಡಿದಂತೆ ಸಾಧನೆಯನ್ನು ತಾಳ್ಮೆ ಮತ್ತು ಪ್ರೀತಿಯಿಂದ ಅನುಸರಿಸಲು ಪ್ರಾಯೋಗಿಕ ಸಲಹೆಗಳನ್ನು ನೀಡುವುದು.

“ಅವರು ಜಗನ್ಮಾತೆಯ ಪ್ರೇಮದ ಮೂರ್ತ ಅಭಿವ್ಯಕ್ತಿಯಾಗಿದ್ದರು — ಪ್ರೇಮ, ನಮ್ಮ ಗುರುಗಳ ಪ್ರೇಮ ಮತ್ತು ದಿವ್ಯ ಪ್ರೇಮದ ಸಾಕಾರ!”

“ಪರಮಹಂಸ ಯೋಗಾನಂದರು ತಮ್ಮ ದೇಹವನ್ನು ತೊರೆದ ನಂತರ, ‘ಪ್ರೇಮ ಮಾತ್ರ ನನ್ನ ಸ್ಥಾನವನ್ನು ತುಂಬಬಲ್ಲದುʼ ಎಂದು ಹೇಳಿದ್ದಾರೆ. ಪ್ರೀತಿಯೇ ಅತ್ಯಂತ ಪ್ರಬಲವಾದ ವಿಶ್ವಾತ್ಮಕ ಆಕರ್ಷಣೆಯ ಶಕ್ತಿಯಾಗಿದೆ, ಅದು ಸೃಷ್ಟಿಯನ್ನು ನಿರಂತರವಾಗಿ ಸೃಷ್ಟಿಕರ್ತನ ಕಡೆಗೆ ಸೆಳೆಯುತ್ತಿರುತ್ತದೆ, ಎಂದು ನಾವು 'ದ ಹೋಲಿ ಸೈನ್ಸ್‌' ನಿಂದ ಕಲಿಯುತ್ತೇವೆ. ಈ ಜಗತ್ತಿನಲ್ಲಿ ಯಾರೂ ‘ಪ್ರೀತಿಯನ್ನು ಕೊಡಲುʼ ಸಾಧ್ಯವಿಲ್ಲ; ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಬಹುದಷ್ಟೆ, ಆಗ ದಿವ್ಯ ಪ್ರೇಮವು ನಮ್ಮ ಮೂಲಕ ಹರಿದು ಹೊರಹೊಮ್ಮುತ್ತದೆ. ಇದನ್ನೇ ಶ್ರೀ ದಯಾ ಮಾತಾ ಸುಂದರವಾಗಿ ಮತ್ತು ಸಂಪೂರ್ಣವಾಗಿ ಮಾಡಿದ್ದಾರೆ. ಅವರು ಎಲ್ಲಿಗೆ ಹೋದರೂ, ಅವರಿಂದ ದಿವ್ಯ ಪ್ರೇಮವು ಹೊರಹೊಮ್ಮುತ್ತಿತ್ತು. ಎಸ್‌ಆರ್‌ಎಫ್‌ನ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡುವಾಗ, ಅವರ ಪ್ರೀತಿಯ ಸ್ಪಂದನವು ಬೊನಾವೆಂಚರ್ ಹೋಟೆಲ್‌ನ ಇಡೀ ಕ್ಯಾಲಿಫೋರ್ನಿಯಾ ಬಾಲ್ ರೂಂ ಅನ್ನು ತುಂಬುತ್ತಿತ್ತು ಹಾಗೂ ಅದನ್ನು ಎಲ್ಲರೂ, ಎಸ್‌ಆರ್‌ಎಫ್‌ನ ಅನುಯಾಯಿಗಳಲ್ಲದವರೂ ಗ್ರಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಅವರ ಪ್ರೀತಿಯು ಅವರ ನಿಜವಾದ, ಮುಗ್ಧ ನಮ್ರತೆಯಿಂದ ಅಲಂಕರಿಸಲ್ಪಟ್ಟಿತ್ತು ಮತ್ತು ಸುಗಂಧಭರಿತವಾಗಿತ್ತು. ಇಡೀ ಮನುಕುಲದ ಇತಿಹಾಸದಲ್ಲಿ ಅರವತ್ತು ವರ್ಷಗಳಿಂದ ಪ್ರಮುಖ ಸಂಸ್ಥೆಯ ನಾಯಕರೊಬ್ಬರು ಸಂಸ್ಥೆಯ ಯಶಸ್ಸಿಗೆ ತಾನು ಕಾರಣವೆಂದು ಹೇಳಿಕೊಳ್ಳಲು ಒಮ್ಮೆಯಾದರೂ ಪ್ರಯತ್ನಿಸದ ಇನ್ನೊಂದು ಉದಾಹರಣೆ ನನಗೆ ತಿಳಿದಿಲ್ಲ. ಶ್ರೀ ದಯಾ ಮಾತಾ ಎಂದಿಗೂ ಹಾಗೆ ಮಾಡಲಿಲ್ಲ; ಅವರ ಬರಹಗಳು ಮತ್ತು ಉಪನ್ಯಾಸಗಳಲ್ಲಿ ಅವರು ಯಾವಾಗಲೂ ಅದರ ಯಶಸ್ಸು ನಿಜವಾಗಿಯೂ ಯಾರಿಗೆ ಸಲ್ಲಬೇಕೋ ಅವರಿಗೇ ನೀಡುತ್ತಾರೆ — ನಮ್ಮ ಗುರುವಿಗೆ ಮತ್ತು ಭಗವಂತನಿಗೆ. ಎಸ್‌ಆರ್‌ಎಫ್ ಸನ್ಯಾಸಿಗಳ ಮುಂದಿನ ಪೀಳಿಗೆಗಳು ಮತ್ತು ಸಾಮಾನ್ಯ ಶಿಷ್ಯರೆಲ್ಲರೂ ಶ್ರೀ ದಯಾ ಮಾತಾರವರ ಅನುಕರಣೀಯ ಜೀವನದಿಂದ, ತಮ್ಮ ಸ್ವಂತ ಜೀವನವನ್ನು ಸೌಜನ್ಯಶೀಲ ಮತ್ತು ಪ್ರೀತಿಯ ನಮ್ರತೆಯಿಂದ ನಡೆಸಲು ಪ್ರೇರೇಪಿಸಲ್ಪಡುತ್ತಾರೆ.”

“ಮಹಾನ್ ಗುರುಗಳೆಲ್ಲರೂ ಇದ್ದಾರೆ: ಅವರು ನಮ್ಮ ಜಗತ್ತಿನ ಸಂಪೂರ್ಣ ಅವ್ಯವಸ್ಥೆಯ ಸಮಯದಲ್ಲಿ ಅಂಧಕಾರ ಮತ್ತು ಹತಾಶೆಯಲ್ಲಿರುವ ಮನುಕುಲವನ್ನು ಮಾರ್ಗದರ್ಶಿಸುವ ಬೆಳಕಿನ ಕಿರಣಗಳಂತಿದ್ದಾರೆ; ನಂತರ ಅದಕ್ಕಿಂತ ಹೆಚ್ಚಿನ ಮುಖ್ಯವಾದ ಕಾರ್ಯವನ್ನು ಹೊಂದಿರುವ ಶಿಷ್ಯರು ಇದ್ದಾರೆ: ಅವರ ಕೆಲಸವೆಂದರೆ, ಆ ಬೆಳಕಿನ ಕಿರಣವನ್ನು ಕಾಪಾಡಿಕೊಳ್ಳುವುದು ಮತ್ತು ಪೋಷಿಸುವುದು, ಆಗ ಅದು ಎಂದಿಗೂ ನಂದಿಹೋಗುವುದಿಲ್ಲ ಅಥವಾ ಮಂಕಾಗುವುದಿಲ್ಲ, ಇದರಿಂದ ಅದು ಕಷ್ಟದ ಸಮಯಗಳಲ್ಲಿ ನಮಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಇದೇ ನಮ್ಮ ಪೂಜ್ಯ ಶ್ರೀ ದಯಾ ಮಾತಾರವರ ಧ್ಯೇಯವಾಗಿತ್ತು. ಅವರು ನಮ್ಮ ಗುರುಗಳ ಬೋಧನೆಗಳು ಮತ್ತು ಧ್ಯೇಯಗಳ ಬೆಳಕಿನ ರಕ್ಷಕಿಯಂತಿದ್ದರು.”

“ನಮ್ಮ ಅತ್ಯಂತ ಪ್ರೀತಿಯ ಶ್ರೀ ದಯಾ ಮಾತಾಜಿಯಂತಹ ಆತ್ಮದ ಸ್ಥಿತ್ಯಂತರದ ವಿಷಯದಲ್ಲಿ ಭಾವನೆಗಳ ಮಹಾಪೂರವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಗುರುದೇವರ ಶುದ್ಧತೆ ಮತ್ತು ಆದೇಶಗಳನ್ನು ತುಂಬಾ ಗಾಢವಾಗಿ ಕಾಪಾಡಿದ ಅವರ ತೀವ್ರತೆಗೆ ಸಾಟಿಯಾಗುವಂಥದ್ದು ಈ ದ್ವಾಪರ ಯುಗದಲ್ಲಿ ಎಲ್ಲೂ ಕಂಡುಬರುವುದಿಲ್ಲ.

“ಅವರ ನಿಷ್ಕಳಂಕ ನಿಸ್ವಾರ್ಥತೆ, ಧೃತಿಗೆಡದ ಸಮರ್ಪಣೆ, ಬೆರಗುಗೊಳಿಸುವ ನಿಷ್ಠೆ, ಅತ್ಯಂತ ಕ್ರಿಯಾತ್ಮಕ ಆಧ್ಯಾತ್ಮಿಕತೆ ಮತ್ತು ಅವರ ದಿಗ್ಭ್ರಮೆಗೊಳಿಸುವ ಸರಳತೆಯು ಇಂದಿನ ಜಗತ್ತಿನಲ್ಲಿ ಆಳವಾಗಿ ಲೋಪವಾಗಿರುವ ಮತ್ತು ದಾರುಣವಾಗಿ ಕಾಣೆಯಾಗಿರುವ ಗುಣಗಳಾಗಿವೆ; ಆದರೂ ಅವರು ಆ ಒಬ್ಬನಿಗಾಗಿ (ಭಗವಂತನಿಗಾಗಿ) ಸಂಪೂರ್ಣ ಪ್ರೀತಿ ಮತ್ತು ಭಕ್ತಿಯಿಂದ ನಡೆದುಕೊಂಡರು, ಒಂದಲ್ಲ ಒಂದು ದಿನ ನಾವೆಲ್ಲರೂ ಅವನೊಂದಿಗೆ ಮುಖಾಮುಖಿಯಾಗಬೇಕೆಂದು ಹಾರೈಸಲೇಬೇಕು — ಅವರು ಪರಿಪೂರ್ಣ ಮತ್ತು ಸರಿಸಾಟಿಯಿಲ್ಲದ ಮಾದರಿಯಾಗುವುದಷ್ಟೇ ಅಲ್ಲ, ಆದರೆ ಹತ್ತಿರದ ಭವಿಷ್ಯದಲ್ಲಿ ಯಾರೂ ಪುನರಾವರ್ತಿಸುವ ಸಾಧ್ಯತೆಯಿಲ್ಲದ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.

“ದಯಾ ಮಾತಾಜಿಯವರ ಜೀವನದ ವ್ಯಾಪ್ತಿಯು ಮಾನವನ ಮನಸ್ಥಿತಿಯನ್ನು ಸುಲಭವಾಗಿ ಮೀರಿ ಹೋಗುತ್ತದೆ. ಭಾಷಣಗಳನ್ನು ಮಾಡಬಹುದು, ಪುಸ್ತಕಗಳನ್ನು ಬರೆಯಬಹುದು, ಆದರೆ ಭಗವಂತ ಮತ್ತು ಗುರುದೇವರ ಕಾರ್ಯಕ್ಕೆ ಆಕೆಯ ಅನುಕರಣೀಯ ಶ್ರುತಿಗೂಡುವಿಕೆಯು ಶಾಶ್ವತವಾಗಿ ಉಳಿಯುತ್ತದೆ, ಅದನ್ನು ಒಬ್ಬರೂ ಬಿಡದಂತೆ, ನಾವೆಲ್ಲರೂ ನಮ್ಮ ಜೀವನದಲ್ಲಿ ಅನುಕರಿಸಬೇಕು ಮತ್ತು ಕಾರ್ಯಗತಗೊಳಿಸಬೇಕು.

“ಭಗವಂತ ಮತ್ತು ಗುರುಗಳ ಪ್ರೇಮದ ಜ್ಯೋತಿಯನ್ನು ನಿಜವಾದ ಯೋಧನ ಶೌರ್ಯದೊಂದಿಗೆ ಹೊತ್ತಿದ್ದ ಅವರು ನೈಜ ಮುಖಂಡರಾಗಿದ್ದರು, ಅವರು ಪ್ರಚಾರ ಕಾರ್ಯಕ್ಕಾಗಿ ಮತ್ತು ತನ್ನ ರಾಜನಿಗಾಗಿ (ಭಗವಂತನಿಗಾಗಿ) ತನ್ನೆಲ್ಲವನ್ನೂ ನೀಡಲು ಸಿದ್ಧರಿದ್ದರು.”

“ನಾನು ಮಾತಾಜಿಯವರಿಗೆ ಗೌರವವನ್ನು ವ್ಯಕ್ತಪಡಿಸುತ್ತೇನೆ, ಅವರ ಪ್ರೀತಿ ಮತ್ತು ಸಹಾನುಭೂತಿಯು ನಮ್ಮ ಹೃದಯಗಳನ್ನು ಮುಟ್ಟಿತು ಮತ್ತು ನಮ್ಮ ಹೃದಯಗಳಲ್ಲಿ ದಿವ್ಯ ಉತ್ಸಾಹವನ್ನು ತುಂಬಿತು.”

“ನನಗೆ ದಯಾ ಮಾತಾರವರನ್ನು ಮುಖತಃ ಭೇಟಿಯಾಗುವ ಸುಯೋಗವಿರಲಿಲ್ಲ, ಆದರೆ ಅನೇಕ ವರ್ಷಗಳ ನನ್ನ ಸಾಧನೆಯಲ್ಲಿ ಅವರು ಹಲವಾರು ಬಾರಿ ನನ್ನ ಕನಸಿನಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸಾಯುವ ಮುಂಚಿನ ಕೆಲವು ವಾರಗಳಲ್ಲಿ ಅವನಿಗಾಗಿ ಉತ್ಕಟ ಪ್ರಾರ್ಥನೆ ಮಾಡುತ್ತಿರುವಾಗಲೊಮ್ಮೆ. ಮಾ ಬಂದು ಆಶೀರ್ವದಿಸುವ ಅರ್ಥದಲ್ಲಿ ತಮ್ಮ ಹಣೆಯನ್ನು ನನ್ನ ಹಣೆಯ ಮೇಲೆ ಒತ್ತಿದರು, ಹಾಗೂ ಅದರ ಮೂಲಕ, ನನ್ನ ಸ್ನೇಹಿತನಿಗಾಗಿ ನಾನು ಪ್ರಾರ್ಥನೆ ಮಾಡುವಾಗ ಅದೇ ರೀತಿ ಮಾಡುತ್ತ ದೃಶ್ಯೀಕರಿಸಬೇಕಾದ ಪ್ರಬಲ ಮಾರ್ಗವನ್ನು ಅಂತರ್ಬೋಧೆಯಿಂದ ನನಗೆ ತೋರಿಸಿದರು. ಆದ್ದರಿಂದ ಅವರು ಬದುಕಿದ್ದಾಗ ನಾನು ಅವರನ್ನು ಯಾವತ್ತೂ ಭೇಟಿಯಾಗಿರದಿದ್ದರೂ, ನನ್ನ ಜೀವನದಲ್ಲಿ ಮಾ ಅವರ ಉಪಸ್ಥಿತಿಯು ತುಂಬಾ ನೈಜ ಮತ್ತು ಮೂರ್ತಸ್ವರೂಪದ್ದಾಗಿತ್ತು.”

“ನಾನು ಕಥೆ ಹೇಳಬಯಸುವುದಿಲ್ಲ; ಅವರು ನನ್ನ ಹೃದಯದಲ್ಲಿದ್ದಾರೆ ಎಂದು ಮಾತ್ರ ಹೇಳಬಯಸುತ್ತೇನೆ. ಅವರು ನನ್ನ ಆರಾಧ್ಯ ದೈವ. ಅವರಂತೆ ನಾನಾಗಬಯಸುತ್ತೇನೆ.”

“2003 ರಲ್ಲಿ, ನನ್ನ ತಾಯಿ ಹಾಗೂ ನನ್ನ ಪತಿಗೆ ಆರು ತಿಂಗಳ ಅಂತರದಲ್ಲಿ ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಪತ್ತೆಯಾಯಿತು, ಇಬ್ಬರಿಗೂ ಬದುಕಲು ಸ್ವಲ್ಪವೇ ಸಮಯವಿದೆ ಎಂದು ಹೇಳಲಾಯಿತು. ಇಬ್ಬರೂ ಸುಮಾರು ಒಂದೇ ಸಮಯದಲ್ಲಿ ತೀವ್ರ ಅಸ್ವಸ್ಥರಾದರು. ನನಗೆ ಈಸ್ಟ್‌ ಕೋಸ್ಟ್‌ಗೆ ಅಂತಿಮ ಪ್ರವಾಸವನ್ನು ಕೈಗೊಳ್ಳಲು ಸಾಧ್ಯವಾಯಿತು ಮತ್ತು ನನ್ನ ತಾಯಿಯು ನನ್ನ ತೋಳುಗಳಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆಯುವ ಅವಕಾಶ ನನಗೆ ದಕ್ಕಿತು. ಆಕೆಯ ಮರಣದ ಎರಡು ದಿನಗಳ ನಂತರ, ನನ್ನ ಗಂಡನ ಸ್ಥಿತಿಯು ಹದಗೆಟ್ಟಿದ್ದರಿಂದ ಮನೆಗೆ ಮರಳಲು ನನಗೆ ಕರೆ ಬಂದಿತು. ನಾನು ಮನೆಗೆ ಬಂದ ಕೆಲವು ದಿನಗಳ ನಂತರ, ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾದ ಘಟಕದಲ್ಲಿದ್ದರು ಮತ್ತು ಬದುಕುವ ನಿರೀಕ್ಷೆ ಇರಲಿಲ್ಲ. ಆ ರಾತ್ರಿ ನಾನು ಜಗನ್ಮಾತೆಯಲ್ಲಿ, ಅವಳು ಯಾವಾಗಲೂ ನನ್ನೊಂದಿಗೆ ಇದ್ದಾಳೆ ಎಂದು ನನಗೆ ತಿಳಿದಿದ್ದರೂ, ದಯವಿಟ್ಟು ಅದನ್ನು ದೃಢೀಕರಿಸಲು ನನಗೆ ಮಾನುಷ ಸಂಕೇತವನ್ನು ನೀಡು ಎಂದು ಆಳವಾಗಿ ಪ್ರಾರ್ಥಿಸಿದೆ. ನನ್ನ ಸಮಚಿತ್ತತೆಯನ್ನು ಕಾಯ್ದುಕೊಳ್ಳಲು ನಾನು ಹೆಣಗಾಡುತ್ತಿದ್ದೆ ಮತ್ತು ಕೆಲವೊಮ್ಮೆ ದುಃಖವು ಅಗಾಧವಾಗಿತ್ತು.

“ಮರುದಿನವೇ ನನಗೆ ಮದರ್ ಸೆಂಟರ್‌ನಿಂದ ಫೋನ್‌ ಬಂತು. ನಾನು ಮದರ್ ಸೆಂಟರ್‌ಗೆ ಕರೆಯನ್ನೂ ಮಾಡಿರಲಿಲ್ಲ, ಬರೆದೂ ಇರಲಿಲ್ಲ, ಆದ್ದರಿಂದ ನನಗೆ ಬಹಳ ಆಶ್ಚರ್ಯವಾಯಿತು. ಇಂಪಾದ ದನಿ ಹೇಳಿತು, ‘ನಾನು ನಿಮಗೆ ಒಬ್ಬ ಸನ್ಯಾಸಿನಿಯೊಂದಿಗೆ ಮಾತನಾಡಲು ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಬಯಸುತ್ತೇನೆ, ಏಕೆಂದರೆ ನಿಮಗಾಗಿ ದಯಾ ಮಾತಾರ ಸಂದೇಶವೊಂದಿದೆ, ಆದರೆ ನಾನು ಹಾಗೆ ಮಾಡುವ ಮೊದಲು, ಜಗನ್ಮಾತೆ ನಿಮ್ಮೊಂದಿಗಿದ್ದಾಳೆ ಎಂದು ನಿಮಗೆ ನೇರವಾಗಿ ಹೇಳಲು ಅವರು ನನಗೆ ಹೇಳಿದ್ದಾರೆ.’ ಆ ಮಾತುಗಳನ್ನು ಕೇಳಿ, ಅಳತೆ ಅಥವಾ ಪದಗಳಿಗೆ ಮೀರಿದ ಕೃತಜ್ಞತೆಯಿಂದ ಅಳುತ್ತ ನಾನು ಕುಸಿದು ಕುಳಿತೆ. ಕೆಲವು ಕ್ಷಣಗಳ ನಂತರ ಸನ್ಯಾಸಿನಿಯೊಬ್ಬರು ಫೋನ್‌ ತೆಗೆದುಕೊಂಡು, ಪ್ರೀತಿಯ ಮಾತಾಜಿಯ ಸಂದೇಶವನ್ನು ಓದಿ ನನ್ನ ಆತ್ಮಕ್ಕೆ ಸಾಂತ್ವನ ಹೇಳಿದರು. ಇದು ಪ್ರೀತಿಯ ಮಾತಾಜಿಯವರಿಗೆ ಭಗವಂತ ಮತ್ತು ಗುರೂಜಿಯೊಂದಿಗಿದ್ದ ಪರಿಪೂರ್ಣ ಶ್ರುತಿಗೂಡುವಿಕೆ ಮತ್ತು ಎಲ್ಲರ ಬಗ್ಗೆಯೂ ಅವರಿಗಿದ್ದ ಮಹಾನ್ ಸಹಾನುಭೂತಿ ಮತ್ತು ಪ್ರೀತಿಯ ಅಗಾಧವಾದ ಉದಾಹರಣೆಯಾಗಿದೆ. ಪ್ರೀತಿಯ ಮಾತಾಜಿಯನ್ನು ಅವರ ಭೌತಿಕ ರೂಪದಲ್ಲಿ ಭೇಟಿಯಾಗುವ ಸೌಭಾಗ್ಯ ನನಗೆ ಎಂದಿಗೂ ಇರಲಿಲ್ಲ, ಆದರೆ ಅವರ ಪ್ರೀತಿ ಮತ್ತು ಸಹಾನುಭೂತಿಗಳು ನನ್ನ ಹೃದಯ ಮತ್ತು ಆತ್ಮದ ಮೇಲೆ ಕೆತ್ತಲ್ಪಟ್ಟಿವೆ.”

“ಅವರ ಉಪಸ್ಥಿತಿಯಲ್ಲಿರುವುದೇ ಎಂದಿಗೂ ಮರೆಯಲಾಗದ ಅನುಭವ. ನಾವು ಅವರ ಪ್ರೀತಿಯ ಅಲೆಗಳಲ್ಲಿ ಮಿಂದಿದ್ದೇವೆ, ಅದು ನಮಗೆ ಆನಂದದ ಕಣ್ಣೀರನ್ನು ತರಿಸಿದೆ.”

“ನಮ್ಮ ಪ್ರೀತಿಯ ದಯಾ ಮಾತಾ ಮತ್ತು ಎಸ್‌ಆರ್‌ಎಫ್ ಬೋಧನೆಗಳೊಂದಿಗೆ ಅಕ್ಷರಶಃ ‘ಬೆಳೆದ’ ನಮ್ಮಂತಹವರಿಗೆ, ಅವರು ನಮ್ಮೊಂದಿಗೆ ಇರುವುದು ಮತ್ತು ಅವರ ಪ್ರೀತಿಯನ್ನು ಎಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಅನುಭವಿಸುವುದೇ ಒಂದು ಅದ್ಭುತ. ನಾನು ಇಷ್ಟು ವರ್ಷ ಸೈಕಲ್ ಓಡಿಸುವುದನ್ನು ಕಲಿಯುತ್ತಿದ್ದೆನೆಂಬಂತೆ ಮತ್ತು ನಾನು ತುಂಬಾ ಅಸ್ಥಿರವಾದಾಗ ನನ್ನನ್ನು ಸ್ಥಿರಗೊಳಿಸಲು ಸಿದ್ಧರಾಗಿರಲು ನನ್ನ ಜೊತೆ ಅವರು ಓಡುತ್ತಿದ್ದರೆಂಬಂತೆ ನನಗೆ ಭಾಸವಾಗುತ್ತಿತ್ತು. ನಾನು ಚೆನ್ನಾಗಿರುತ್ತೇನೆ ಎಂದು ನನಗೆ ಹೇಗೋ ತಿಳಿದಿತ್ತು; ನಾನು ಕಲಿಯಬೇಕಾದುದನ್ನು ಅವರು ತಮ್ಮ ಉದಾಹರಣೆಯ ಮೂಲಕ ನನಗೆ ಕಲಿಸಿದರು — ಗುರು-ಶಿಷ್ಯರ ಸಂಬಂಧದೆಡೆಗೆ ಮತ್ತು ಪರಮಹಂಸ ಯೋಗಾನಂದರು ನಮಗೆ ನೀಡಿದ ಬೋಧನೆಗಳೆಡೆಗೆ ಅಚಲವಾದ ಸಮರ್ಪಣೆ ಮತ್ತು ಕೃತಜ್ಞತೆಯನ್ನು ಕಲಿಸಿದರು, ಮತ್ತು ನಾವು ಎಂದೆಂದಿಗೂ ಪ್ರೀತಿಸಲ್ಪಡುತ್ತೇವೆ ಎಂಬುದನ್ನೂ ಕಲಿಸಿದರು. ಈಗ ಆ ಪ್ರೀತಿಯನ್ನು ಎಲ್ಲರೂ ಅನುಭವಿಸುವಂತೆ ಮಾಡುವುದು.”

“ನಮ್ಮ ಪ್ರೀತಿಯ ಶ್ರೀ ದಯಾ ಮಾತಾರವರ ನಿಧನದ ಬಗ್ಗೆ ಕೇಳಿ ನನಗೆ ತಂಬಾ ದುಃಖವಾಯಿತು. ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನನ್ನ ಸಂಪೂರ್ಣ ಆಧ್ಯಾತ್ಮಿಕ ಜೀವನವು ನಮ್ಮ ಪ್ರೀತಿಯ ಮಾ ಅವರ ಅಧ್ಯಕ್ಷತೆ ಮತ್ತು ಆಧ್ಯಾತ್ಮಿಕ ಮುಖಂಡತ್ವದಿಂದ ಕೂಡಿದೆ. ನಾನು ಮಾ ಅವರ ಫೈಂಡಿಂಗ್ ದಿ ಜಾಯ್ ವಿದಿನ್ ಯು ಪುಸ್ತಕದಲ್ಲಿ 1948 ರಲ್ಲಿ ಅವರ ಮೃತ್ಯುದವಡೆಯ ಅನುಭವದ ಬಗ್ಗೆ ಓದಿದೆ. ಇದು ನನಗೆ ಸಾಂತ್ವನ ನೀಡಿತು ಮತ್ತು ನಮ್ಮ ಆಧ್ಯಾತ್ಮಿಕ ಕುಟುಂಬ ಮತ್ತು ಎಸ್‌ಆರ್‌ಎಫ್ ಸಂಸ್ಥೆಯ ಮೂಲಾಧಾರವಾಗಲು ಅವರು ಮಾನುಷ ಕಲ್ಪನೆಯನ್ನು ಮೀರಿ 62 ವರ್ಷಗಳಿಗೂ ಹೆಚ್ಚು ಕಾಲ ಈ ಕಾರ್ಯವನ್ನು ಕೈಗೊಂಡಿದ್ದಾರೆ ಎಂಬ ಬಗ್ಗೆ ಕೃತಜ್ಞತೆ ನನ್ನಲ್ಲಿ ತುಂಬಿಬಂತು! ಅವರು ಆಗ ಅನುಭವಿಸಿದ ಅದ್ಭುತ ಪ್ರೀತಿಯಲ್ಲಿ ಈಗ ಸಂಪೂರ್ಣವಾಗಿ ಮುಳುಗಿದ್ದಾರೆ ಎಂದು ನಾನು ನಂಬುತ್ತೇನೆ.”

“ನಾನು ಅವರಿಗೆ ಬರೆದಾಗಲೆಲ್ಲ ಅವರು ನನಗೆ ಉತ್ತರಿಸುತ್ತಿದ್ದರು; ಅವರು ಬರೆಯಬೇಕಾಗಿಲ್ಲ ಎಂದು ನಾನು ಹೇಳಿದಾಗಲೂ, ಅವರು ಬರೆದೇ ಬರೆಯುತ್ತಿದ್ದರು. ಪ್ರಪಂಚದಾದ್ಯಂತ ಎಷ್ಟು ಜನರನ್ನು ಅವರು ಕಷ್ಟಪಟ್ಟು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು, ಅವರಿಗೆ ತಮ್ಮ ಜೀವನದ ಪ್ರತಿ ದಿನವೂ ಬರೆಯುತ್ತಿದ್ದರು, ಸಲಹೆ ನೀಡುತ್ತಿದ್ದರು ಮತ್ತು ಅವರಿಗಾಗಿ ಪ್ರಾರ್ಥಿಸುತ್ತಿದ್ದರು! ದಯಾ ಮಾ ನಿಜವಾದ ಸಂತಳು. ನಾನು ಭೇಟಿಯಾದ ಅತ್ಯಂತ ಸುಂದರವಾದ ಆತ್ಮ. ಅವರ ಉದಾಹರಣೆ ಮತ್ತು ಅವರ ಅನಿರ್ಬಂಧಿತ ಪ್ರೀತಿಯಿಂದಾಗಿ ನನ್ನ ಜೀವನವು ಬಹಳ ಬದಲಾಗಿದೆ.”

“ನಾನು 2001 ರಲ್ಲಿ ನನ್ನ ಸ್ವಂತ ಕಂಪನಿಯನ್ನು ಆರಂಭಿಸಿದೆ. ನಾನು ದಯಾ ಮಾತಾರವರ ಆಶೀರ್ವಾದವನ್ನು ಕೋರಿ ಅವರಿಗೆ ಪತ್ರ ಬರೆದಿದ್ದೆ, ಆದರೆ ಅವರ ಅಗಾಧವಾದ ಜವಾಬ್ದಾರಿಗಳು ಮತ್ತು ಕೆಲಸದ ಬಗ್ಗೆ ತಿಳಿದಿದ್ದ ನಾನು ನಿಜವಾಗಿಯೂ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ನನ್ನ ಮಹದಾಶ್ಚರ್ಯಕ್ಕೆ, ಶೀಘ್ರದಲ್ಲೇ ಉತ್ತರ ಬಂದಿತು, ಅದರಲ್ಲಿ ಉಪಕ್ರಮಕ್ಕೆ ಪ್ರೋತ್ಸಾಹವನ್ನು ಮತ್ತು ವಿವರವಾದ ಸಲಹೆಯನ್ನು ನೀಡಿದ್ದರು. ಅದರ ಮನೋಭಾವವು, ಅವರು ನನ್ನನ್ನು ಬಹಳ ವರ್ಷಗಳಿಂದ ಅರಿತಿದ್ದರೋ ಎಂಬಂತೆ, ಸೌಹಾರ್ದಯುತವಾಗಿತ್ತು ಮತ್ತು ಆತ್ಮೀಯವಾಗಿತ್ತು, ಆದರೆ ವಾಸ್ತವದಲ್ಲಿ ನಾವು ಯಾವತ್ತೂ ಭೇಟಿಯಾಗಿರಲಿಲ್ಲ.

“ಇದು ನಿಜವಾಗಿಯೂ, ನನ್ನ ಅದೃಷ್ಟದ ತಾಯಿತಿಯಾಗಿದೆ — ನಾನು, ಮಾ ಅವರ ಪತ್ರವನ್ನು ಫ್ರೇಮ್ ಮಾಡಿ, ಇಷ್ಟು ವರ್ಷಗಳಿಂದ ನನ್ನ ಆಫೀಸ್‌ ಕೋಣೆಯಲ್ಲಿ ಇರಿಸಿದ್ದೇನೆ. ಅವರ ಪತ್ರ ಬಂದಾಗ ನನಗೆ ಅದು ಶುಭ ಶಕುನವಾಗಿ ಕಂಡಿತು, ಬಹುಶಃ ಏಕೆಂದರೆ, ಅದು ಅನಿರೀಕ್ಷಿತವಾಗಿತ್ತು. ಕಾರ್ಪೊರೇಟ್ ‘ಕಾಡಿನಲ್ಲಿ’ ಇರುವ ನನ್ನಂಥವರಿಗೆ ಮಾ ಅವರ ನಿಷ್ಕಳಂಕ ಗುಣ ಮತ್ತು ಸೇವಾ ಮನೋಭಾವವು ಬೆಳಕಿನ ದಾರಿದೀಪವಾಗಿದೆ. ‘ಪ್ರೀತಿಸಿ, ಸೇವೆ ಮಾಡಿ, ಉಳಿದದ್ದನ್ನು ಭಗವಂತನಿಗೆ ಬಿಟ್ಟುಬಿಡಿ’ ಎಂಬ ಅವರ ಧ್ಯೇಯವಾಕ್ಯವು ನನ್ನ ಉದ್ಯಮದ ಪಯಣದಲ್ಲಿ ಬಹಳ ಸ್ಫೂರ್ತಿದಾಯಕವಾಗಿದೆ. ಗುರುಗಳ ಆದರ್ಶಗಳನ್ನು ಕಳಂಕರಹಿತವಾಗಿ ಸತತ ಎಂಟು ದಶಕಗಳ ಕಾಲ ಎತ್ತಿ ಹಿಡಿದಿದ್ದಕ್ಕಾಗಿ ಅವರ ಬಗ್ಗೆ ತುಂಬಾ ಹೆಮ್ಮೆಯಿದೆ!”

“ನಾನು ದಯಾ ಮಾತಾರವರನ್ನು ವೈಯಕ್ತಿಕವಾಗಿ ಎಂದೂ ಭೇಟಿಯಾಗಲಿಲ್ಲ, ಆದರೆ ಅವರು ದೇಹತ್ಯಾಗ ಮಾಡಿದಾಗ, ನನಗೆ ಅವರು ಚಿರಪರಿಚಿತರೇನೋ ಎಂಬಂತೆ ಅದು ನನ್ನ ಮನಸ್ಸನ್ನು ತಟ್ಟಿತು. ನನಗೆ ಅವರು ಶಕ್ತಿ ಮತ್ತು ಭದ್ರತೆಯ ಪರ್ವತವನ್ನು ಪ್ರತಿನಿಧಿಸಿದರು — ಅವರು ಇದ್ದಾರೆಂಬ ವಿಷಯವೇ ನನಗೆ ಸಾಂತ್ವನವನ್ನು ನೀಡುತ್ತಿತ್ತು….ಅವರು ಜ್ಞಾನ, ಘನತೆ ಮತ್ತು ಪ್ರೀತಿಯ ಸಾಕಾರರೂಪವಾಗಿದ್ದರು — ಎಲ್ಲವೂ ಮಾನುಷ ರೂಪದಲ್ಲಿ.”

“ನನ್ನ ಜೀವನದ ಮೇಲೆ ಅವರು ಬೀರಿದ ಪರಿಣಾಮವನ್ನು ನಾನು ಸಂಪೂರ್ಣವಾಗಿ ವಿವರಿಸಲಾರೆ: ಅವರು ನನಗೆ ಸ್ತ್ರೀತ್ವದ ದಿವ್ಯ ಸೌಂದರ್ಯ ಮತ್ತು ಪ್ರೇಮದ ಮಾದರಿಯಾಗಿದ್ದರು.”

“ಪ್ರೀತಿಯ ಶ್ರೀ ದಯಾ ಮಾ….ಅನೇಕ ವರ್ಷಗಳಿಂದ ಬಂದ ನಿಮ್ಮ ಪತ್ರಗಳಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ. ಗುರೂಜಿ ಮತ್ತು ನೀವು ನನ್ನ ಜೀವನವನ್ನು ಬದಲಿಸಿರುವಿರಿ. ನಿಮ್ಮ ಸಲಹೆ, ಅನಿರ್ಬಂಧಿತ ಪ್ರೇಮ ಮತ್ತು ನಿರಂತರ ಆಶೀರ್ವಾದಗಳು ನನಗೆ ಸದಾ ನೆರವಾಗಿವೆ. ಓ ಮಾ, ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ನಿಮ್ಮ ಆಶೀರ್ವಾದಕ್ಕಾಗಿ ನಾನು ಈಗಲೂ ನನ್ನ ಹೃದಯ, ಮನಸ್ಸು ಮತ್ತು ಆತ್ಮವನ್ನು ತೆರೆದಿಡುತ್ತೇನೆ. ನಿಮ್ಮ ಪವಿತ್ರ ಪುಸ್ತಕ ಎಂಟರ್ ದಿ ಕ್ವಯಟ್‌ ಹಾರ್ಟ್ ನನ್ನ ದೈನಂದಿನ ಬೈಬಲ್ ಆಗಿದೆ!”

“1970 ರ ದಶಕದ ಉತ್ತರಾರ್ಧದಲ್ಲಿ, ಘಟಿಕೋತ್ಸವದ ನಂತರ ಶ್ರೀ ದಯಾ ಮಾತಾ, ಭಕ್ತರಿಗೆ ನೀಡಿದ ಸತ್ಸಂಗದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರಕಿತು. ಅವರ ಉಪನ್ಯಾಸದ ನಂತರ ಭಕ್ತರು ಪ್ರಾರ್ಥನಾ ಮಂದಿರದಿಂದ ಹೊರಡುವಾಗ ಅವರು ಪ್ರತಿಯೊಬ್ಬ ಭಕ್ತರನ್ನೂ ಆಶೀರ್ವದಿಸಿದರು. ನಾನು ಅವರಿಗೆ ನಮಸ್ಕರಿಸುತ್ತ, ಅವರ ಕಣ್ಣುಗಳಲ್ಲಿ ನೋಡಿದೆ. ಅದು ಅನಂತತೆಯೊಳಗೆ, ಭಗವಂತನ ಕಣ್ಣಿನೊಳಗೆ ನೋಡುವಂತಿತ್ತು. ಅವು ಅಂತ್ಯವಿಲ್ಲದ ಆಳವಾಗಿದ್ದವು. ಇದನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವರು ಮುಗುಳ್ನಕ್ಕು ನನ್ನನ್ನು ಮದರ್ ಸೆಂಟರ್‌ಗೆ ಸ್ವಾಗತಿಸಿದರು ಮತ್ತು ನಾನು ದಿಗ್ಭ್ರಮೆಯಲ್ಲಿ ಪ್ರಾರ್ಥನಾ ಮಂದಿರವನ್ನು ಬಿಟ್ಟು ಹೊರಟೆ. ಈ ಅನುಭವವನ್ನು ನಾನೆಂದೂ ಮರೆತಿಲ್ಲ....

“ನಮ್ಮಲ್ಲಿ ಯಾರಿಗೆ ಗುರುಗಳ ಪರಿಚಯವಿರಲಿಲ್ಲವೋ ಅವರಿಗೆ, ಆಕೆಯು ಗುರು ಕಲಿಸಿದ ಎಲ್ಲದಕ್ಕೂ ಜೀವಂತ ಉದಾಹರಣೆಯಾಗಿದ್ದರು.”

“ಅನೇಕ ವರ್ಷಗಳ ಹಿಂದೆ, ಮದರ್ ಸೆಂಟರ್‌ನಲ್ಲಿ ಶ್ರೀ ದಯಾ ಮಾತಾರವರನ್ನು ಭೇಟಿಯಾಗಲು ಭಕ್ತರ ಒಂದು ತಂಡದೊಂದಿಗೆ ಹೋಗಲು ನನಗೆ ಆಹ್ವಾನ ಬಂದಿತ್ತು. ನಮಗೆ ಅವರು ಗ್ರಂಥಾಲಯದಲ್ಲಿ ಅನೌಪಚಾರಿಕ ಸತ್ಸಂಗವನ್ನು ನೀಡಿದರು. ನಾನು ದಯಾ ಮಾತಾರವರ ಕಣ್ಣುಗಳಿಂದ ಸಂಪೂರ್ಣವಾಗಿ ಸ್ತಂಭಿತನಾದೆ. ನಾನು ‘ಸಾಗರದಾಳದ ನೋಟ’ ಎಂಬ ಪದಗುಚ್ಛವನ್ನು ಕೇಳಿದ್ದೆ, ಆದರೆ ನಾನು ಹಿಂದೆಂದೂ ಯಾರ ಕಣ್ಣುಗಳಲ್ಲೂ ಅಂತಹ ಅತ್ಯಮೋಘ ಆಳ, ಶಕ್ತಿ ಮತ್ತು ಸೌಂದರ್ಯವನ್ನು ನೋಡಿರಲಿಲ್ಲ. ನಮ್ಮ ಪ್ರೀತಿಯ ಮಾ ಈ ಭೂಮಿಯ ಮೇಲೆ ನಡೆದಾಡಿದ ಸಮಯದಲ್ಲೇ ನಾನೂ ಇದ್ದುದಕ್ಕಾಗಿ ನನಗೆ ಹೆಮ್ಮೆಯೆನಿಸುತ್ತದೆ.”

“ದಯಾ ಮಾ ನನ್ನ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದನ್ನು ವಿವರಿಸಲು ನನಗೆ ಸಾಧ್ಯವೇ ಇಲ್ಲ. ಸುಮಾರು ಹದಿನೈದು ವರ್ಷಗಳಿಂದ, ಅವರ ಪ್ರವಚನಗಳನ್ನು ಕೇಳುವುದು ಅಥವಾ ಅವರ ಬರಹಗಳನ್ನು ಓದುವುದು ನನ್ನ ದಿನಚರಿಯ ಭಾಗವಾಗಿದೆ ಮತ್ತು ಅವು ನಿಜವಾಗಿಯೂ ನನ್ನ ಜೀವನವನ್ನು ರೂಪಿಸಿವೆ. ಅವರು ತಪ್ಪದೆ ನನ್ನನ್ನು ಉತ್ಸಾಹ ಮತ್ತು ಆಧ್ಯಾತ್ಮಿಕ ಸಂಕಲ್ಪ ಮತ್ತು ಭಗವಂತನ ಹಂಬಲದ ಉತ್ಕಟ ಭಾವದಲ್ಲಿರಿಸಿದ್ದರು. ಆದರೆ ಎಲ್ಲಕ್ಕಿಂತ ಮಿಗಿಲಾಗಿ ದಿವ್ಯ ಪ್ರಿಯತಮೆಯೊಂದಿಗೆ ಬಹಳ ಆತ್ಮೀಯವಾದ, ಮಧುರವಾದ, ಪ್ರೀತಿಯ, ವಿಶ್ವಾಸಾತ್ಮಕ ಮತ್ತು ಭಾವಪರವಶ ಸ್ನೇಹವನ್ನು ಬೆಳೆಸಿಕೊಳ್ಳಲು ಅವರು ನನಗೆ ನೆರವಾಗಿದ್ದಾರೆ.

“ನನ್ನ ಧ್ಯಾನಗಳನ್ನು ಸಂಸರ್ಗದ ನೈಜ ಸಮಯಗಳನ್ನಾಗಿ ಪರಿವರ್ತಿಸಲು ದಯಾ ಮಾ ನನಗೆ ಸಹಾಯ ಮಾಡಿದರು. ಮತ್ತು ನನ್ನ ಕರ್ತವ್ಯಗಳನ್ನು ನನ್ನ ಭಗವಂತನ ಸಾನ್ನಿಧ್ಯದಲ್ಲಿ ಪ್ರೀತಿಯ ಕಾರ್ಯಗಳನ್ನಾಗಿ ಪರಿವರ್ತಿಸಲು ಅವರು ನನಗೆ ನೆರವಾದರು. ಶಿಷ್ಯನಾಗುವುದರ ಅರ್ಥವೇನು, ಸ್ನೇಹಿತನಾಗುವುದರ ಅರ್ಥವೇನು, ವಿನಮ್ರ ಸೇವಕನಾಗಿರುವುದರ ಅರ್ಥವೇನು, ಮುಖ್ಯಸ್ಥನಾಗಿರುವುದರ ಅರ್ಥವೇನೆಂದು ಮಾ ನನಗೆ ತೋರಿಸಿದರು — ಆದರೆ ಎಲ್ಲಕ್ಕಿಂತ ಮಿಗಿಲಾಗಿ ಅವರು ಪ್ರೇಮಿಯಾಗುವುದರ ಅರ್ಥವನ್ನು ನನಗೆ ತೋರಿಸಿದರು. ಭಗವಂತನ ಮೇಲಿನ ಭಕ್ತಿಯ ದ್ರಾಕ್ಷಾರಸವನ್ನು ಕುಡಿದ ಪ್ರೇಮಿ.”

“ಅವರ ಉಪಸ್ಥಿತಿ, ಸಾಧನೆಗಳು, ಮಾದರಿ, ಅನೇಕ ತಲೆಮಾರುಗಳವರೆಗೆ ನಕ್ಷತ್ರದಂತೆ ಹೊಳೆಯುತ್ತವೆ. ಭಾರತದ ಅತ್ಯಂತ ಶ್ರೇಷ್ಠರು ಶ್ರೀ ಶ್ರೀ ದಯಾ ಮಾತಾರವರ ರೂಪದಲ್ಲಿ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದರು.”

“ಅವರ ಜೀವನಗಾಥೆಯು ನನಗೆ ಗ್ರಂಥಗಳಷ್ಟನ್ನು ಹೇಳಿದೆ. ಗುರುವಿನೆಡೆಗೆ ಅವರ ಭಕ್ತಿಯು ದೃಢನಿಷ್ಠೆಯದಾಗಿತ್ತು ಮತ್ತು ಎಸ್‌ಆರ್‌ಎಫ್‌ನ ಅವರ ನಾಯಕತ್ವ ಅದ್ಭುತವಾಗಿತ್ತು. ಭಗವಂತನೊಂದಿಗೆ ಆಳವಾದ ಸಂಸರ್ಗವನ್ನು ಅಭ್ಯಾಸ ಮಾಡುವ ಮೂಲಕ ಆಧ್ಯಾತ್ಮಿಕ ಜೀವನವನ್ನು ಹೇಗೆ ಬದುಕಬೇಕು ಎಂಬುದಕ್ಕೆ ಅವರು ನನಗೆ ನಿರಂತರ ಸ್ಫೂರ್ತಿ ನೀಡಿದರು. ನನ್ನ ಇಡೀ ಜೀವನದಲ್ಲಿ ಅವರು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಮತ್ತು ಬೀರುತ್ತಿರುತ್ತಾರೆ ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ.”

“ಶ್ರೀ ದಯಾ ಮಾತಾರವರು, ಬೆಳಕು, ಸರ್ವ ಪ್ರೀತಿ ಮತ್ತು ಒಳ್ಳೆಯತನದ ವ್ಯಕ್ತಿ ಎಂದು ಅವರನ್ನು ಕೇವಲ ನೋಡುವುದರಿಂಲೇ ನಿಮಗೆ ಯಾವುದೇ ಸಂದೇಹವಿಲ್ಲದೆ ತಿಳಿಯುತ್ತದೆ. ನಮ್ಮ ಕುಟುಂಬಕ್ಕೆ, ಶ್ರೀ ದಯಾ ಮಾತಾರವರು ಸ್ಫೂರ್ತಿಯ ಅಕ್ಷಯ ಆಕರವಾಗಿದ್ದಾರೆ ಮತ್ತು ಪರಮಹಂಸ ಯೋಗಾನಂದರ ನಿಜವಾದ ಶಿಷ್ಯ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.”

“ನನಗೆ ಮಾ ಬಗ್ಗೆ ಯೋಚಿಸಿದಾಗಲೆಲ್ಲ ನಾನು ಪ್ರೀತಿಯನ್ನು ಅನುಭವಿಸುತ್ತೇನೆ.”

“ವಿಶಾಲವಾದ ಪೆಸಿಫಿಕ್ ಸಾಗರವು ಶ್ರೀ ದಯಾ ಮಾತಾರವರ ಅತ್ಯಾಕರ್ಷಕ ಉಪಸ್ಥಿತಿಯಿಂದ ನನ್ನನ್ನು ಇನ್ನು ಮುಂದೆ ಪ್ರತ್ಯೇಕಿಸುವುದಿಲ್ಲ. ನಮ್ಮ ಪ್ರೀತಿಯ ಅಧ್ಯಕ್ಷೆ, ಮುಖ್ಯಸ್ಥೆ, ಶಿಕ್ಷಕಿ, ಸ್ನೇಹಿತೆ ತಮ್ಮ ಗುರುವಿನ ಬಳಿಗೆ ಹೋಗಿದ್ದಾರೆ, ಬೆಳಕಿನ ಲೋಕಕ್ಕೆ. ಪರಮಾನಂದದ ಅಲೆಗಳು ಅವರ ಅಪ್ಯಾಯಮಾನವಾದ ಆನಂದದಿಂದ ನಮ್ಮ ಹೃದಯವನ್ನು ಪರಿಶುದ್ಧಗೊಳಿಸುತ್ತವೆ. ನಾವು ದಡದಲ್ಲಿ ಉಳಿದಿದ್ದರೂ, ನಾವು ಅನಾಥರೂ ಅಲ್ಲ, ಅವರು ಗುರುವಿನೊಂದಿಗಿರುವರೆಂದು ದುಃಖಿಸುವ ಅಗತ್ಯವೂ ಇಲ್ಲ. ಗುರು ಮತ್ತು ಶಿಷ್ಯೆ — ಅವರ ಪ್ರೀತಿಯ ಕಿರಣಗಳು ಪ್ರಪಂಚದಾದ್ಯಂತ ತಲುಪುತ್ತವೆ. ಕರುಣಾಮಯಿ ಮಾ, ನಿಮ್ಮ ಘನತೆವೆತ್ತ ಜೀವನಕ್ಕೆ ಧನ್ಯವಾದಗಳು.”

“ಭೂಮಿಯಲ್ಲಿರಲಿ ಅಥವಾ ಸ್ವರ್ಗದಲ್ಲಿರಲಿ, ಶ್ರೀ ದಯಾ ಮಾತಾ, ನನ್ನ ಮುಂದಿನ ಹಾದಿಯನ್ನು ಬೆಳಗುತ್ತಾರೆ.”

ಇದನ್ನು ಹಂಚಿಕೊಳ್ಳಿ